ಸೋತು ಗೆದ್ದವರು
ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ ಪುಸ್ತಕದ ಶೀರ್ಷಿಕೆಯೇ ಅಂಕಣವಾಗಿರುವ ಬರಹದಲ್ಲಿ ತೀವ್ರತರವಾದ ಕ್ಯಾನ್ಸರ್ ನಿಂದ ಬಳಲಿ, ಸಾವಿನ ಕದ ತಟ್ಟಿ ಬಂದು ಮತ್ತೆ ಎದ್ದು ನಿಂತವರ ಕಥೆಯಿದೆ. ನಮ್ಮ ಕನ್ನಡದವರಾದ ಅನುಪಮಾ ನಿರಂಜನ ಅವರು ಸಾವನ್ನು ತಡೆದು ನಿಲ್ಲಿಸಿ, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಹಾಗೂ ಕಿಮೋಥೆರಪಿಗಳ ನಡುವೆಯೂ ಜೀವನೋತ್ಸಾಹ ಕುಗ್ಗದೇ ಹದಿಮೂರು ವರ್ಷಗಳ ಕಾಲ ಬದುಕಿದ್ದನ್ನು ಉಲ್ಲೇಖಿಸುತ್ತಾ ಮಾಯಾ ತಿವಾರಿಯ ಕಾನ್ಸರ್ ಹೋರಾಟದ ಸೋಲು ಗೆಲುವನ್ನು ದಾಖಲಿಸಿದ್ದಾರೆ. ಮೂಲತಃ ಭಾರತೀಯರಾದ ಮಾಯಾ ತಿವಾರಿಯವರ ಪೂರ್ವಜರನ್ನು ಬ್ರಿಟಿಷರು, ಭಾರತದಿಂದ ದಕ್ಷಿಣ ಅಮೆರಿಕದ ಪುಟ್ಟ ದೇಶವಾದ 'ಗುಯಾನಾ' ಕ್ಕೆ ಗಂಟು ಮೂಟೆಗಳಂತೆ ಸಮುದ್ರದ ಮೂಲಕ ಸಾಗಿಸಿದ್ದರು. ಆ ದಾರಿಯಲ್ಲಿ ಎಷ್ಟೋ ಮಹಿಳೆಯರ ಮಾನಭಂಗವನ್ನು ಮಾಡಿದ್ದರು. ಎಷ್ಟೋ ಗಂಡಸರನ್ನು ಹೊಡೆದು ಬಡಿದಿದ್ದರು. ಇನ್ನು ಕೆಲವರನ್ನು ಸಮುದ್ರಕ್ಕೆ ಎಸೆದಿದ್ದರು. ಈ ಭೀಕರ ಇತಿಹಾಸದ ನೋವಿನ ನೆನಪನ್ನು ಮುಂದಿನ ಪೀಳಿಗೆಯವರಾದ ಮಾಯಾ ತಿವಾರಿ ಪಿತ್ರಾರ್ಜಿತವಾಗಿ ಪಡೆದಿದ್ದರು. ಅದರಿಂದ ಪಾರಾಗಲು ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಮುಂದೆ ಗುಯಾನಾ ಬ್ರಿಟಿಷ...